Fact Check: ಕರ್ನಾಟಕದ ಜನತೆಯನ್ನು 'ಪಾಪಿಗಳೆಂದು' ಪ್ರಧಾನಿ ಮೋದಿ ಕರೆದಿದ್ದಾರೆಯೇ?
ಕರ್ನಾಟಕದ ಜನರನ್ನು ಪ್ರಧಾನಿ ನರೇಂದ್ರ ಮೋದಿಯವರು ʼಪಾಪಿಗಳುʼ ಎಂದು ಕರೆದಿದ್ದಾರೆ ಎಂಬರ್ಥದ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
By Mahammad Muaad Published on 6 May 2024 6:56 AM GMTಕರ್ನಾಟಕದ ಜನರನ್ನು ಪ್ರಧಾನಿ ನರೇಂದ್ರ ಮೋದಿಯವರು ʼಪಾಪಿಗಳುʼ ಎಂದು ಕರೆದಿದ್ದಾರೆ ಎಂಬರ್ಥದ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು "ಈ ಚುನಾವಣೆಯಲ್ಲಿ ಕರ್ನಾಟಕದವರು ಮಾಡಿರುವ ಪಾಪಕ್ಕೆ ಅವರಿಗೆ ತಕ್ಕ ಪ್ರತಿಫಲ ನೀಡಿ, ಮೋದಿ ಮುಂಬರುವ ವರ್ಷಗಳಲ್ಲೂ ನಿಮಗೆ ಗ್ಯಾರಂಟಿ ನೀಡುತ್ತಾರೆ" ಎನ್ನುವುದು ಸೆರೆಯಾಗಿದೆ.
ಈ ವೀಡಿಯೊವನ್ನು ಹಲವಾರು ಮಂದಿ ಫೇಸ್ಬುಕ್ ಮತ್ತು ಇತರ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿದ್ದಾರೆ. ಬಳಕೆದಾರರೋರ್ವರು, " ಪ್ರಧಾನಿಯವರು ಖಂಡಿತಾ ಸೋತಿದ್ದಾರೆ. ತಮ್ಮದೇ ಪೋಸ್ಟ್ಗೆ ಅವರು ಪದೇಪದೇ ಗೋಲ್ ಹೊಡೆಯುತ್ತಿದ್ದಾರೆ. ಇದೀಗ ಅವರು ಕರ್ನಾಟಕದ ಜನರನ್ನು ಪಾಪಿಗಳು ಎಂದು ಕರೆದಿದ್ದಾರೆ. ಇಂತಹಾ ಅವಮಾನಗಳಿಗೆ ಎದಿರೇಟು ನೀಡಲು ಕರ್ನಾಟಕಕ್ಕೆ ಸಾಧ್ಯವಿದೆ. ಬಿಜೆಪಿ ಸಂಪೂರ್ಣವಾಗಿ ರಾಜ್ಯದಲ್ಲಿ ಇಲ್ಲವಾಗಲಿದೆ" ಎಂದು ಬರೆದುಕೊಂಡಿದ್ದಾರೆ.
ಅದೇ ವೀಡಿಯೊವನ್ನು ನಿಮಗೆ ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.
ಫ್ಯಾಕ್ಟ್ಚೆಕ್:
ಈ ವೀಡಿಯೊವನ್ನು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಮಾಡಿದಾಗ, ಈ ವೀಡಿಯೊ ಬೇರೆಯೇ ಸನ್ನಿವೇಶವನ್ನೊಳಗೊಂಡಿದ್ದು, ತಿರುಚಲಾಗಿದೆ ಎಂದು ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಪಾರ್ಟಿಯನ್ನುದ್ದೇಶಿಸಿ ಹೇಳಿದ್ದಾರೆಯೇ ಹೊರತು ಕರ್ನಾಟಕದ ಜನತೆಯನ್ನಲ್ಲ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕೀವರ್ಡ್ ಸರ್ಚ್ ಮಾಡಿದಾಗ ಯೂಟ್ಯೂಬ್ ನಲ್ಲಿ YOYO TV ಕನ್ನಡ ಎಂಬ ಹೆಸರಿನ ಚಾನೆಲ್ ನಲ್ಲಿ 2024ರ ಎಪ್ರಿಲ್ 28ರಂದು ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನುದ್ದೇಶಿಸಿ ಮಾತನಾಡಿದ ವೀಡಿಯೊ ದೊರಕಿತು.
ಈ ವೀಡಿಯೋದ 20:53 ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, "ಕಾಂಗ್ರೆಸ್ ಪಕ್ಷವು ರೈತರಿಗೆ ಮಾಡಿರುವ ದ್ರೋಹ ಮಹಾಪಾಪವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಬ್ಯಾಂಕ್ ಖಾತೆಗಳಿಗೆ 10,000ರೂ. ಜಮಾ ಮಾಡಲಾಗಿತ್ತು. ಕಾಂಗ್ರೆಸ್ ಸರಕಾರ ರಚನೆಯಾದ ಬಳಿಕ ಸಿಗುತ್ತಿದ್ದ 4000ರೂ.ಯನ್ನೂ ತಡೆ ಹಿಡಿದರು. ಅವರಿಗೆ ವೋಟು ಸಿಕ್ಕಿರುವುದರಿಂದ ಅವರಿಗೂ ರೈತರಿಗೂ ಈಗ ಯಾವ ಸಂಬಂಧವೂ ಇಲ್ಲ. ಮೋದಿ ನೀಡುವ 6000ರೂ. ಮಾತ್ರ ಈಗ ರೈತರಿಗೆ ಸಿಗುತ್ತಿದೆ. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣವನ್ನು ಪಡೆಯುತ್ತೀರಿ, ಚಿಂತಿಸಬೇಡಿ. ಕರ್ನಾಟಕದವರು ಮಾಡಿದ ಪಾಪಕ್ಕೆ ಈ ಚುನಾವಣೆಯಲ್ಲಿ ಶಿಕ್ಷೆ ಕೊಡಿ. ದೆಹಲಿಯಿಂದ ಕಳುಹಿಸಲಾದ ಹಣವು ಮುಂಬರುವ ವರ್ಷಗಳಲ್ಲಿಯೂ ಮುಂದುವರಿಯುತ್ತದೆ ಎಂಬ ಭರವಸೆಯನ್ನು ಮೋದಿ ನಿಮಗೆ ನೀಡುತ್ತಾರೆ." ಎಂದು ಹೇಳುವುದು ಕಂಡುಬಂದಿದೆ.
28ನೇ ಏಪ್ರಿಲ್, 2024 ರಂದು ಅಪ್ಲೋಡ್ ಮಾಡಲಾದ ಪ್ರಧಾನಿ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅದೇ ವೀಡಿಯೊ ದೊರಕಿತು. 20:41 ಟೈಮ್ಸ್ಟ್ಯಾಂಪ್ನಿಂದ, ಮೇಲೆ ತಿಳಿಸಿದಂತೆಯೇ ಪ್ರಧಾನಿ ಮೋದಿ ಭಾಷಣವನ್ನು ಕೇಳಬಹುದು.
ಆದ್ದರಿಂದ, ಪ್ರಧಾನಿ ಮೋದಿ ಅವರು ಕರ್ನಾಟಕದ ಜನರನ್ನು ಪಾಪಿಗಳು ಎಂದು ಉಲ್ಲೇಖಿಸಿಲ್ಲ, ಬದಲಾಗಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ವೈರಲ್ ವೀಡಿಯೊವನ್ನು ಕ್ರಾಪ್ ಮಾಡಿ ಬೇರೆಯೇ ರೀತಿಯಲ್ಲಿ ತಿರುಚಲಾಗಿದೆ